
ಅಫಜಲಪುರ ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ದೇವಲ ಗಾಣಗಾಪುರದ ಸಂಗಮ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಲಾತೂರ್ ಜಿಲ್ಲೆಯ ಉದ್ಗರಿ ಗ್ರಾಮದ ಭಕ್ತ ಶರೀಶ ಪಾಟೀಲ್ ಅವರು ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.ಕುಟುಂಬದೊಂದಿಗೆ ದತ್ತ ದರ್ಶನ ಪಡೆಯಲು ಬಂದಿದ್ದ ಶರೀಶ ಪಾಟೀಲ್ ಅವರು ಸಂಗಮ ಹೊಳೆಯಲ್ಲಿ ಪೂಜಾ ಕಾರ್ಯಕ್ರಮ ಮುಗಿಸಿ, ಗಂಗಾ ಆರತಿ ಬಿಡಲು ಇಳಿದ ವೇಳೆ ಕಾಲು ಜಾರಿ ಹೊಳೆ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.ಇತ್ತೀಚೆಗೆ ಇದೇ ಪ್ರದೇಶದಲ್ಲಿ ಒಂದು ವಾರದ ಹಿಂದೆಯೇ ಭಾಲ್ಕಿ ತಾಲೂಕಿನ ಯುವಕನೂ ಸ್ನಾನ ಮಾಡಲು ಇಳಿದು ಸಾವನ್ನಪ್ಪಿದ್ದ ಘಟನೆ ನೆನಪಾಗುತ್ತದೆ. ನಿರಂತರವಾಗಿ ಇಂತಹ ಘಟನೆಗಳು ನಡೆಯುತ್ತಿದ್ರೂ, ಜಿಲ್ಲಾ ಆಡಳಿತ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದೆ ಎಂಬುದು ಭಕ್ತರು ಮತ್ತು ಸ್ಥಳೀಯರ ಆಕ್ರೋಶದ ವಿಷಯವಾಗಿದೆ.ಸಂಗಮ ಪ್ರದೇಶದಲ್ಲಿ ಸೂಕ್ತ ಎಚ್ಚರಿಕಾ ಫಲಕಗಳು, ಜೀವ ರಕ್ಷಕ ಸಿಬ್ಬಂದಿ ಹಾಗೂ ಭದ್ರತಾ ಕ್ರಮಗಳ ಕೊರತೆಯಿಂದಾಗಿ ಭಕ್ತರ ಜೀವಗಳು ನಿರಂತರ ಅಪಾಯದಲ್ಲಿದ್ದು, “ಹೀಗೆ ಮುಂದುವರಿದರೆ ಭಕ್ತರ ಜೀವಕ್ಕೆ ಬೆಲೆ ಉಳಿಯುವುದಿಲ್ಲ” ಎಂಬ ಆತಂಕ ಗ್ರಾಮಸ್ಥರಲ್ಲಿದೆ.ಸ್ಥಳೀಯರು ಹಾಗೂ ಭಕ್ತರು ಜಿಲ್ಲೆಯ ಅಧಿಕಾರಿಗಳು ತಕ್ಷಣ ಗಮನಹರಿಸಿ, ಸಂಗಮ ಪ್ರದೇಶದಲ್ಲಿ ಜೀವ ರಕ್ಷಕ ವ್ಯವಸ್ಥೆ, ಎಚ್ಚರಿಕೆ ಫಲಕಗಳು ಮತ್ತು ಪೊಲೀಸ್ ನಿಗಾವ್ಯವಸ್ಥೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
